WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Wednesday, February 6, 2013

ನಾಟಕ ಶಿರೋಮಣಿ ಎ. ವಿ. ವರದಾಚಾರ್

ಕನ್ನಡ ರಂಗಭೂಮಿಯ ವಿಷಯದಲ್ಲಿ ಆಸ್ಥೆ ತಳೆದವರಿಗೆ ‘ನಾಟಕದ ವರದಾಚಾರ್ಯ’ರ ಹೆಸರು ತುಂಬಾ ಪರಿಚಿತ. ವರದಾಚಾರ್ಯರು ಹುಟ್ಟಿದ್ದು 1869ರಲ್ಲಿ. ತೀರಿಕೊಂಡದ್ದು 1926ರಲ್ಲಿ ತಮ್ಮ ಜೀವಿತದ ಮುಕ್ಕಾಲು ಪಾಲನ್ನು ಅವರು ಕನ್ನಡ ವೃತ್ತಿರಂಗದ ಏಳಿಗೆಗಾಗಿ ಮುಡುಪಿಟ್ಟರು. ತುಂಬ ಪ್ರಭಾವಶಾಲಿಯೆನಿಸಿದ ‘ರತ್ನಾವಳೀ ನಾಟಕ ಮಂಡಳಿ’ಯನ್ನು ಕಟ್ಟಿದರು. ಕಲಾವಂತರನ್ನು ಹುಡುಕಿ, ಕೂಡಿಸಿ, ರಂಗಶಿಕ್ಷಣ ಕೊಟ್ಟು ನಾಟಕಕಲೆಯಲ್ಲಿ ಪರಿಣತರನ್ನಾಗಿ ಮಾಡಿ, ಅವರಿಗೂ ತಮಗೂ ಕೀರ್ತಿ ತಂದುಕೊಂಡರು. ಕನ್ನಡ ನಾಟಕಗಳನ್ನು ಅಭಿನಯಿಸುತ್ತ ಕನ್ನಡ ಭೂಮಿಯ ಉದ್ದಗಲದಲ್ಲಿ ಮಾತ್ರವೇ ಅಲ್ಲದೆ, ನೆರೆಯ ತಮಿಳು, ತೆಲುಗು ರಾಜ್ಯಗಳಲ್ಲಿಯೂ ಸಂಚರಿಸಿ, ಅಲ್ಲಿನ ಜನ ನಮ್ಮ ನಾಟಕವನ್ನು ಮೆಚ್ಚಿ ಹೊಗಳುವಂತೆ ಮಾಡಿದರು. ಪ್ರದರ್ಶನವು ಉತ್ತಮಗೊಳ್ಳುವ ಸಲುವಾಗಿ, ಅವರ ಕಾಲದಲ್ಲಿ ಕ್ರಾಂತಿಕಾರಕ ಎನಿಸುವಂತಹ ಮಾರ್ಪಾಡುಗಳನ್ನೂ ಸುಧಾರಣೆಗಳನ್ನೂ ಮಾಡಿದರು. ಸ್ವತಃ ವರದಾಚಾರ್ಯರ ವೈಶಿಷ್ಟ್ಯವನ್ನು ಹತ್ತುಪಾಲು ಹಿಗ್ಗಿಸಿ, ನೋಡಿದವರು ಎಂದೆಂದಿಗೂ ಮರೆಯದಂತೆ ಮನಸ್ಸಿನ ಮೇಲೆ ಅಚ್ಚೊತ್ತಿಬಿಡುವ ಕಲಾವಂತಿಕೆ. ಅವರ ಅಭಿನಯವನ್ನು ಕಂಡಿದ್ದವರು ಹೇಳುವಂತೆ ‘ನುಡಿಯಲ್ಲಿ ಹಿಡಿಯಲಾಗದ ಕಲಾಸೌಭಾಗ್ಯ ಅವರದು.’

‘ನಾಟಕ ವರದಾಚಾರ್ಯ’ರ ಪೂರ್ಣ ಹೆಸರು-ಅನಮನಪಲ್ಲಿ ವೆಂಕಟವರದಾಚಾರ್. ಹುಟ್ಟಿದ್ದು ಚಿತ್ರದುರ್ಗದಲ್ಲಿ 1869ನೇ ವರ್ಷದ ಫೆಬ್ರವರಿ 2 ದಿನಾಂಕದಂದು. ತಂದೆ, ರಂಗಸ್ವಾಮಿ ಅಯ್ಯಂಗಾರರು ರೆವಿನ್ಯೂ ಶಿರಸ್ತೇದಾರರು. ಶಾಸ್ತ್ರೀಯಸಂಗೀತ ಎಂದರೆ ಅವರಿಗೆ ತುಂಬ ಆಸಕ್ತಿ. ಅದರಿಂದ ತಮ್ಮ ಮಗನಿಗೆ ಬಾಲ್ಯದಿಂದಲೇ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಸಂಗೀತದ ಶಿಕ್ಷಣ ಕೊಡಿಸಿದರು. ಬಾಲಕನ ಸೊಂಪು ದೇಹಕ್ಕೆ ತಕ್ಕ ಸುಂದರ ಮುಖ; ಚುರುಕು ಬುದ್ಧಿ. ಸಂಗೀತ ಕಲಿಯುತ್ತಲೇ ಶಾಲೆಗಳಲ್ಲಿಯೂ ಮುಂದಾಗಿ, ಹದಿನೈದು ವರ್ಷ ವಯಸ್ಸಿನ ಒಳಗಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲವರ್ಗದ ಯಶಸ್ಸು ಪಡೆದ. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಎಫ್.ಎ. ತರಗತಿಯಲ್ಲಿ ಅಭ್ಯಾಸ ನಡೆಸಿದ. ಆ ಸಮಯದಲ್ಲಿ ಎರಗಿದ ಅಘಾತವೆಂದರೆ ತಾಯಿಯ ಮರಣ. ಅದರಿಂದಾಗಿ ಬಾಲಕನ ಬಾಳಿನಲ್ಲಿ ಬಿರುಗಾಳಿ ಬೀಸಿ ಬಡಿದಂತಾಗಿ, ಉತ್ಸಾಹ ಬತ್ತಿ, ಶಾಲೆಗೆ ಶರಣು ಹೊಡೆದು ಸಂಗೀತ ಕಛೇರಿ, ನಾಟಕ ಎಂದು ಕಾಲ ಕಳೆಯತೊಡಗಿದ. ಹಿಂದಿನ ವರ್ಷವೇ ಮದುವೆಯಾಗಿದ್ದ ತಂಗಿಯ ಮನೆಯಲ್ಲಿ ಬಿಡಾರ ಹೂಡಿದ್ದುದರಿಂದ ಊಟ, ನೆರಳುಗಳಿಗೆ ಕೊರತೆ ಇಲ್ಲದಿದ್ದರೂ ಜೀವನದ ನೆಲೆ ತಪ್ಪಿ ಮುಂದಿನ ಗುರಿ ಕಾಣದಾಗಿತ್ತು.

ವರದಾಚಾರ್ಯರು ಕಾಲ ಕಳೆಯುವ ಸಲುವಾಗಿ ನಾಟಕ ಗಳನ್ನು ನೋಡಿ, ಸಂಗೀತ ಕಛೇರಿಗಳನ್ನು ಕೇಳತೊಡಗಿದಾಗ, ತಮಗೇ ಅರಿವಿಲ್ಲದೆಯೆ ಅನುಕರಣ ಕಲೆ ಮೈ ಹತ್ತಿಕೊಂಡಿತು. ಕಂಡಕಂಡ ಕಂಪೆನಿ ನಾಟಕಗಳಲ್ಲಿ ತಾವೇ ಮುಂದಾಗಿ ಹೋಗಿ ಬೇಡಿ ಮಾಡಿದ ಪಾತ್ರಗಳಿಗಾಗಿ ಪುಡಿಗಾಸು ಸಿಕ್ಕಿದ್ದು ದೊಡ್ಡ ಮಾತಲ್ಲ; ಇವರ ಪಾತ್ರನಿರ್ವಹಣೆಯನ್ನು ನೋಡಿದ ಪ್ರೇಕ್ಷಕರು ಕಳಪೆ ಪಾತ್ರಗಳಿಗೆ ಕೂಡ ಕಳೆಯನ್ನೇರಿಸಿದ ಕಲಾವಂತಿಕೆಗೆ ತಲೆ ದೂಗಿ, ಚಪ್ಪಾಳೆಯನ್ನಿಕ್ಕಿ ಹುರಿದುಂಬಿಸಿದ್ದು ದೊಡ್ಡ ಮಾತು. ವರದಾಚಾರ್ಯರು ಆಗ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದ್ದ ‘ಗೊಲ್ಲರ ಪೇಟೆ ನಾಟಕ ಕಂಪೆನಿ’ಯಿಂದ ಮೊದಲುಗೊಂಡು ಕರೆದ ಕಡೆ ಓಗೊಟ್ಟು ಪಾತ್ರಗಳನ್ನು ಅಭ್ಯಾಸ ಮಾಡಿ, ಹಾಡುಗಳಿಗೆ ತಾವೇ ಮಟ್ಟು ಕೂಡಿಸಿ, ಪಾತ್ರಕ್ಕೆ ತಮ್ಮದೇ ವಿಶಿಷ್ಟರೀತಿಯ ಅಭಿನಯ ಮೆರಗು ಕೊಟ್ಟು ಪ್ರಸಿದ್ಧಿಗೆ ಬಂದರು.

ಆಚಾರ್ಯರನ್ನು ಪ್ರಸಿದ್ಧ ನಟರನ್ನಾಗಿ ಮಾಡಿದ ಕೀರ್ತಿ ಗೌರೀ ನರಸಿಂಹಯ್ಯನವರದು. ರಂಗ ಸಂಗೀತದಲ್ಲಿ, ಪಾತ್ರಾಭಿನಯದಲ್ಲಿ ಗೌರೀ ನರಸಿಂಹಯ್ಯನವರ ನಿರ್ದೇಶನದಂತೆ ಆಚಾರ್ಯರು ಅಸಮಾನ್ಯ ಸಾಧನೆ ಮಾಡಿದನಂತರ, ಮೈಸೂರಿನಲ್ಲಿ ‘ಸತ್ಯ ಸಂಧೋಪಾಖ್ಯಾನ’, ‘ರತ್ನಾವಳಿ’ ಮುಂತಾದ ನಾಟಕಗಳು ಅಪಾರ ಜನಪ್ರಿಯತೆ ಗಳಿಸಿದವು. ಈ ಮಧ್ಯೆ ಆಚಾರ್ಯರ ಮಗಳು ಮತ್ತು ಪತ್ನಿ ನಿಧನರಾದರು. ಯಶಸ್ಸಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದ ಆಚಾರ್ಯರಿಗೆ, ಪ್ರಪಾತಕ್ಕೆ ಕಡೆದು ಉರುಳಿದ ಅನುಭವವಾಯಿತು. ಮನಸ್ಸಿನ ತುಂಬ ಕತ್ತಲೆ ತುಂಬಿ, ಜೀವನ ದುರ್ಭರವಾಯಿತು. ‘ನನಗಿನ್ನು ನಾಟಕರಂಗ ಬೇಡ’ ಎಂದು ಮಂಡಳಿಯನ್ನು ಬಿಟ್ಟು ಬೆಂಗಳೂರಿನಲ್ಲಿಯೇ ನಿಂತುಬಿಟ್ಟರು. ಜೀವನ ನಿರ್ವಹಣಕ್ಕಾಗಿ ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿದರು. ಕಾಲ ಉರುಳಿತು, ತಳಮಳಿಸುತ್ತಿದ್ದ ಜೀವಕ್ಕೆ ತಂಪು ಕಾಣಲಿಲ್ಲ. ಪಿಡುಗು ಅಡಗಿ ವರ್ಷವಾಗುತ್ತ ಬಂತು. ವರದಾ ಚಾರ್ಯರು ಯಾಂತ್ರಿಕವಾಗಿ ಉದ್ಯೋಗದಲ್ಲಿ ತೊಡಗಿದ್ದರು. ಸ್ನೇಹಿತರೂ ಅಭಿಮಾನಿಗಳೂ ಅವರನ್ನು ಮತ್ತೆ ರಂಗಭೂಮಿಗೆ ಎಳೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಬಂಧುಗಳು ದುಂಬಾಲುಬಿದ್ದರೂ ಅವರು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ‘ಮೈಸೂರು ಬೇಡ, ನಿಮ್ಮ ಸಲುವಾಗಿ ಬೆಂಗಳೂರಿನಲ್ಲಿಯೇ ನಾಟಕ ಮಂಡಳಿ ಕಟ್ಟೋಣ’ ಎಂದು ಆಚಾರ್ಯರ ಅಭಿಮಾನಿಗಳು 1900ರಲ್ಲಿ ’ಬೆಂಗಳೂರು ಯೂನಿಯನ್’ ಎಂಬ ಹೆಸರಿನಿಂದ ನಾಟಕ ಸಭೆಯನ್ನೂ ಸ್ಥಾಪಿಸಿದರು. ಕಡೆಗೊಮ್ಮೆ ವರದಾಚಾರ್ಯರು ರೆಸಿಡೆಂಟರ ಕಚೇರಿಯ ಉದ್ಯೋಗವನ್ನು ಬಿಟ್ಟು ನಾಟಕ ಸಭೆಯ ಕಾರ್ಯನಿರ್ವಹಕ್ಕೆ ನಿಂತರು. ಬಂಡವಾಳಕ್ಕಾಗಿ ಐದು ಸಾವಿರ ರೂಪಾಯಿ ಕೂಡಿತು.

ಮೊದಲ ನಾಟಕ ‘ರತ್ನಾವಳಿ’. ಅದರ ಪ್ರಯೋಗವಾದ ನಂತರ ಕ್ರಮವಾಗಿ ‘ಗುಲೇಬಕಾವಲಿ’, ‘ಮನ್ಮಥ ವಿಜಯ’, ‘ಹರಿಶ್ಚಂದ್ರ’, ‘ಶಾಕುಂತಲ’, ‘ಪ್ರತಾಪಸಿಂಹ’ ಎಂಬ ನಾಟಕಗಳು. ‘ಗುಲೇಬಕಾವಲಿ’ ನಾಟಕದಲ್ಲಿ ವರದಾಚಾರ್ಯರೇ ರಾಜಕಿರೀಟಿ ಪಾತ್ರ. ಅವರು ಮಂದಾರವಲ್ಲಿಯ ಉದ್ಯಾನವನಕ್ಕೆ ಮಂದಾರಪುಷ್ಪಕ್ಕಾಗಿ ಪ್ರವೇಶಿಸುವಾಗ ಒಳಗಿನಿಂದಲೇ ಕೇದಾರಗೌಳ ರಾಗದಲ್ಲಿ ಎಸ್. ಜೆ. ನರಸಿಂಹಾಚಾರ್ಯರು ರಚಿಸಿಕೊಟ್ಟಿದ್ದ ಉದ್ಯಾನವನದ ವರ್ಣನೆಯ ಹಾಡನ್ನು ಹಾಡಿಕೊಂಡು ರಂಗಮಂಟಪಕ್ಕೆ ಬರುತ್ತಿದ್ದರು. ಅವರ ಆ ವೇಷಭೂಷಣಗಳನ್ನು ನೋಡಿ, ಪ್ರೇಕ್ಷಕರು ಕರತಾಡನ ಮಾಡುತ್ತ ಆನಂದ ಪರವಶರಾಗುತ್ತಿದ್ದರು. ಶಬ್ದ ನಿಂತ ತಕ್ಷಣ ರಾಜಕಿರೀಟಿಯು, “ಈ ವನವನೆಂತು ಬಣ್ಣಿಪೆ” ಎಂದು ಅನೇಕ ಸಂಗತಿಗಳನ್ನು ಹಾಕಿ, ಪಿಟೀಲ್ ವಾದ್ಯಗಾರರ ಕೈಗಳು ಬಿದ್ದು ಹೋಗುತ್ತದೆಯೋ ಏನೋ ಎಂಬಂತೆ ಸಂಗತಿಗಳನ್ನು ಸೇರಿಸಿ ಹಾಡಿದಾಗ ಪ್ರೇಕ್ಷಕರು ಆನಂದದಿಂದ ಮೈಮರೆಯುತ್ತಿದ್ದರು. ಮುಂದೆ ಮೈಸೂರಿನಲ್ಲಿ ‘ಮೈಸೂರು ರತ್ನಾವಳೀ ನಾಟಕ ಸಭಾ’ ಎಂಬ ಹೊಸ ಮಂಡಳಿಯನ್ನು 1902ರಲ್ಲಿ ಪ್ರಾರಂಭಿಸಲಾಯಿತು. ಕಂಪೆನಿಯ ಸಕಲ ಸ್ವತ್ತಿಗೂ ಆಡಳಿತಕ್ಕೂ ವರದಾಚಾರ್ಯರು ಸರ್ವಾಧಿಕಾರಿಗಳಾದರು.

ಮುಂದಿನ ಎರಡು ದಶಕಗಳ ಕಾಲ, ಆಗಾಗ ಸಣ್ಣಪುಟ್ಟ ಎಡರುಗಳು ಅಡ್ಡ ಬಂದರೂ ಒಟ್ಟಾರೆ ವರದಾಚಾರ್ಯರ ದಿಗ್ವಿಜಯದ ಕಾಲವೆನಿಸಿ, ಕನ್ನಡ ವೃತ್ತಿರಂಗದ ಇತಿಹಾಸದಲ್ಲಿ ಅದು ‘ಸ್ವರ್ಣಯುಗ’ವೇ ಆಯಿತು. ಅವರ ರತ್ನಾವಳೀ ಕಂಪೆನಿ, ಮನೆಮನೆಯ ಮಾತಾಯಿತು. ವರದಾಚಾರ್ಯರ ಸೋದರ ಕೃಷ್ಣಸ್ವಾಮಿ ಅಯ್ಯಂಗಾರರು (ಶಾಮಣ್ಣ) ರೈಲ್ವೆ ಗಾರ್ಡ್ ಉದ್ಯೋಗದಲ್ಲಿದ್ದವರು ಕೆಲಸಬಿಟ್ಟು ಅಣ್ಣನ ನಾಟಕ ಕಂಪೆನಿಯನ್ನು ಸೇರಿ ಆಡಳಿತದ ಮೇಲ್ವಿಚಾರಣೆ ನೋಡಿಕೊಂಡರು. ಅವರೂ ಒಳ್ಳೆಯ ನಟರು. ಹಲವರು ಪರಿಣತ ಕಲಾವಿದರು ಮಂಡಳಿಯನ್ನು ಸೇರಿದರು. ಕ್ರಮವಾಗಿ ಶಾಕುಂತಲ, ರತ್ನಾವಳೀ, ಮನ್ಮಥವಿಜಯ, ಹರಿಶ್ಚಂದ್ರ, ಸತ್ಯವರ್ಮ, ಮಂದಾರವಲ್ಲೀ ಪರಿಣಯ, ಮಾಳವಿಕಾಗ್ನಿಮಿತ್ರ, ನಿರುಪಮಾ, ರಾಮವರ್ಮ-ಲೀಲಾವತಿ, ಕಾಮಪಾಲ, ಪ್ರತಾಪ ಸಿಂಹ, ಸದಾರಮೆ, ಮಕರಂಧಿಕಾಪರಿಣಯ ಇವುಗಳಲ್ಲದೆ, ಸ್ವತಃ ವರದಾಚಾರ್ಯರೇ ರಚಿಸಿದ ಇಂದಿರಾನಂದ, ಮಿಮಲಾ ವಿಜಯ ಮೊದಲಾದ ನಾಟಕಗಳು ರಂಗದ ಮೇಲೆ ಬಂದವು. ಮೊದಲಿಗೆ ಶನಿವಾರದಂದು ವಾರಕ್ಕೆ ಒಂದು ನಾಟಕ ಮಾತ್ರ ಪ್ರದರ್ಶನವಾಗುತ್ತಿದ್ದುದು, ಜನತೆಯ ಒತ್ತಾಯಕ ಕಾರಣ, ಬುಧವಾರ, ಭಾನುವಾರಗಳ ರಾತ್ರಿಯಲ್ಲಿಯೂ ನಾಟಕಗಳು ಪ್ರಯೋಗಗೊಂಡವು. ನಿಂತ ನೀರಾಗದೆ ಮಂಡಳಿ ಹೊಸ ನಾಟಕಗಳನ್ನು ರೂಢಿಸಿಕೊಂಡು, ದೃಶ್ಯ ಸಂಯೋಜನೆ, ರಂಗ ಸಂಗೀತ, ವೇಷಭೂಷಣಗಳ ನಿಟ್ಟಿನಿಂದ ಹೊಸ ಹಾದಿಯನ್ನೇ ನಿರ್ಮಿಸಿ ಕನ್ನಡನಾಡಿನ ಮುಖ್ಯ ಪಟ್ಟಣಗಳಲ್ಲಿ ಬೀಡುಬಿಟ್ಟು, ವೃತ್ತಿನಾಟಕದ ವಿಷಯದಲ್ಲಿ ಜನತೆಯಿಂದ ಅಪಾರ ಅನುರಾಗವನ್ನು ಸಂಪಾದಿಸಿತು. ಸಂಸ್ಥೆಯಲ್ಲಿದ್ದ ನಟವರ್ಗದವರು ಮತ್ತು ಸಿಬ್ಬಂದಿಯವರನ್ನು ತಮ್ಮ ಬಂಧುಗಳು ಎಂದೇ ಆಚಾರ್ಯರು ಕಾಣುತ್ತಿದ್ದರು. ಅವರಿಗೆ ತಾವು ಯಜಮಾನ ಎಂಬ ಗರ್ವವಿರಲಿಲ್ಲ. ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದರು. ಅನೇಕರ ಮುಂಜಿ, ಮದುವೆಗಳಿಗೆ ಸಹಾಯಮಾಡಿ ಕಲೆಯ ಅಭಿವೃದ್ದಿಗಾಗಿಯೇ ಸದಾ ಚಿಂತಿಸುತ್ತ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು.

ಪರಿಣತರಾದ ನಟರಿಂದ ಕೂಡಿ, ಮಂಡಳಿ ತನ್ನ ಕಾಲಮೇಲೆ ತಾನು ನಿಂತಾಗಲೂ ‘ಯಜಮಾನ’ರಾದ ಆಚಾರ್ಯರು ನಿತ್ಯಜಾಗೃತರಾಗಿ, ತಮಗೆ ದೈವದತ್ತವಾಗಿದ್ದ ಕಲೆಯನ್ನು ಬಳಸಿ ಬೆಳೆಸಿಕೊಳ್ಳುತ್ತ, ಪ್ರತಿಯೊಂದು ನಾಟಕದಲ್ಲಿಯೂ ನಾಯಕ ಭೂಮಿಕಿಯಲ್ಲಿ ನಿಂತು, ಜನ ಆವರೆಗೆ ಕಾಣದಂಥ ಪಾತ್ರದ ಗುಣಧರ್ಮವನ್ನು ಹೊಸ ಹೊಸದಾಗಿ ಹರಿಸಿದರು. ಯಾವ ಪಾತ್ರವೇ ಆಗಲಿ ಆಚಾರ್ಯರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಪ್ರೀತಿ, ಕೋಪ, ಶೌರ್ಯ, ಕರುಣೆ-ಯಾವ ಭಾವವನ್ನಾಗಲಿ ಬೇರೆ ಯಾರೂ ತಮಗೆ ಸಮರಲ್ಲ ಎನ್ನುವಂತೆ ತೋರಿಸುತ್ತಿದ್ದರು. ನಮ್ಮ ದೇಶದಲ್ಲಿ ತನ್ನ ತಪ್ಪಿನಿಂದಲೋ ದುರದೃಷ್ಟದಿಂದಲೋ ಕಷ್ಟಪಟ್ಟು ಕಡೆಗೂ ಕಷ್ಟದಲ್ಲಿಯೇ ಜೀವನ ಮುಗಿಸುವ ನಾಯಕರ ನಾಟಕಗಳಿರಲಿಲ್ಲ. ಇಂತಹವು ಬಂದದ್ದು ಪಶ್ಚಿಮ ದೇಶಗಳಿಂದ. ಇಂತಹ ನಾಯಕರ ಪಾತ್ರಗಳನ್ನು ವರದಾ ಚಾರ್ಯರು ಅಮೋಘವಾಗಿ ಅಭಿನಯಿಸುತ್ತಿದ್ದರು. ಅವರು ರಾಮವರ್ಮ, ಕೀಚಕ, ರಾವಣ ಮುಂತಾದ ಪಾತ್ರಗಳನ್ನು ಅಭಿನಯಿಸಿದ್ದನ್ನು ಒಮ್ಮೆ ನೋಡಿದವರು ಮರೆಯುವಂತಿರಲಿಲ್ಲ. ಅವರ ಕಂಠ ಅದ್ಭುತವಾದದ್ದು. ಆದರೆ ಸಂಗೀತವನ್ನು ವಿವೇಚನೆ ಇಲ್ಲದೆ ಬಳಸಲಿಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಸಂಗೀತವನ್ನು ಬಳಸಿ ನಾಟಕದ ಪರಿಣಾಮ ಆಳವಾಗುವಂತೆ ಮಾಡಿದರು. ಅಭಿನಯ ಮತ್ತು ಗಾಯನ ಕಲೆಗಳು ಒಬ್ಬ ನಟನಲ್ಲೆ ಹೀಗೆ ಸಮರಸವಾಗಿ ಸೇರುವುದು ಬಹು ವಿರಳ. ಆಚಾರ್ಯರು ವೇಷಭೂಷಣಗಳನ್ನೂ ರಂಗಪರಿಕರಗಳನ್ನೂ ಪಾತ್ರಕ್ಕೆ, ನಾಟಕದ ಕಥಾ ದ್ರವ್ಯಕ್ಕೆ ಅಸಹಜವಾಗದೆ, ಅಸಂಗತವಾಗದೆ ಹೊಂದಿಕೊಳ್ಳುವಂತೆ ಏರ್ಪಡಿಸಿದರು. ಹಳೆಯ ಅನೇಕ ನಾಟಕಗಳನ್ನೂ ಪ್ರದರ್ಶನಕ್ಕೆ ಹೆಚ್ಚು ಯೋಗ್ಯವಾಗುವಂತೆ ತಿದ್ದಿದರು. ತಾವೇ ಸ್ವತಂತ್ರವಾಗಿ ಎರಡು ನಾಟಕಗಳನ್ನು ರಚಿಸಿದರು. ಸಂಸ್ಕೃತ-ಕನ್ನಡಪಂಡಿತರುಗಳನ್ನುತಮ್ಮೊಂದಿಗೇ ಮಂಡಳಿಯಲ್ಲಿ ಇಟ್ಟುಕೊಂಡು, ಸೂಕ್ತ ಸಲಹೆಗಳನ್ನು ಕೊಟ್ಟು ಪುರಾಣಗಳಲ್ಲಿ ಹೇಳಿದ ಕಥೆ ಮತ್ತು ಪಾತ್ರಗಳಿಗೆ ಅಪಚಾರವಾಗದಂತೆ, ಹೊಸ ನಾಟಕ ಗಳನ್ನು ಬರೆಸಿದರು. ಹೀಗೆ ತಮ್ಮ ಮಂಡಳಿಯನ್ನು ಹಲವಾರು ನಿಟ್ಟುಗಳಿಂದ ಸಿದ್ಧಪಡಿಸಿಕೊಂಡು ರಂಗಕಲೆಯನ್ನು ಮತ್ತೆ ಮತ್ತೆ ಮಥಿಸಿ ಹೊಸ ಪಾಕವನ್ನೇ ಸಿದ್ಧಗೊಳಿಸಿ ಆಚಾರ್ಯರು ಆ ಅಮೃತ ವನ್ನು ಊರುಊರುಗಳಿಗೆ ಉಣಬಡಿಸಿದರು.

ಅಪಾರವಾದ ಕೀರ್ತಿಯನ್ನು ಗಳಿಸಿದ ವರದಾಚಾರ್ಯರಿಗೆ 1913ರಲ್ಲಿ, ನಗರದ ಪ್ರಮುಖರು ಒಟ್ಟಾಗಿ ಮಹತ್ ಸತ್ಕಾರಮಾಡಿ ‘ಗಿಫ್ಟೆಡ್ ಆಕ್ಟರ್’ ಎಂಬ ಪ್ರಶಸ್ತಿಯನ್ನು ರತ್ನಖಚಿತವಾದ ತೋಡದೊಂದಿಗೆ ಅರ್ಪಿಸಿದರು. ಉಡುಪಿಯಲ್ಲಿದ್ದಾಗ ಶ್ರೀಕೃಷ್ಣ ದೇಗುಲದಲ್ಲಿ, ಅಷ್ಟ ಮಠಾಧೀಶರೆಲ್ಲರ ಸಮ್ಮುಖದಲ್ಲಿ ‘ಪ್ರಹ್ಲಾದ ಚರಿತ್ರೆ’ ಪ್ರಯೋಗಗೊಂಡಾಗ ಯತಿಗಳು ಅತ್ಯಾನಂದಪಟ್ಟು ಆಚಾರ್ಯರಿಗೆ ‘ನಾಟ್ಯಕಲಾ ಚತುರ’ ಎಂಬ ಪ್ರಶಸ್ತಿಯನ್ನು ಬಂಗಾರದ ತೋಡ ಖಿಲ್ಲತ್ತುಗಳೊಂದಿಗೆ ಕೊಟ್ಟು ಸನ್ಮಾನಿಸಿದರು. ತಿರುಚನಾಪಳ್ಳಿಯ ಪ್ರಮುಖರು ಆಚಾರ್ಯರಿಗೆ ‘ನಾಟಕ ಶಿರೋಮಣಿ’ ಎಂಬ ಮಹಾಪ್ರಶಸ್ತಿಯನ್ನು ರತ್ನಖಚಿತವಾದ ತೋಡಾ ಖಿಲತ್ತುಗಳೊಂದಿಗೆ ಅರ್ಪಿಸಿದರು. ಆಚಾರ್ಯರು ತಮಿಳುನಾಡಿನ ಹಲವು ನಗರಗಳಲ್ಲಿ ನಾಟಕಗಳನ್ನು ಆಡಿ, ಜನರ ಮನಸ್ಸನ್ನು ಸೂರೆಗೊಂಡರು. ಅನೇಕ ಕಡೆ ಜನ ಅವರನ್ನು ಸವರನ್‌ಗಳ ಸರಗಳಿಂದ ಅಲಂಕರಿಸಿದರು.

ಹಲವಾರು ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಎಂಥಹ ಪರಿಸ್ಥಿತಿಯಲ್ಲಿಯೂ ಎಂದಿನಿಂದಲೂ ಹೆಸರಾದ ವರದಾಚಾರ್ಯರ ದಾನಶೀಲತೆ ಬಡವಾಗಲಿಲ್ಲ. ಅವರನ್ನೇ ನಂಬಿ ನಿಂತಿದ್ದ ವಿದ್ಯಾಸಂಸ್ಥೆಗಳಿಗೂ ವಿದ್ಯಾರ್ಥಿ ನಿಲಯಗಳಿಗೂ ಅನಾಥಾಲಯಗಳಿಗೂ ವಾಚನಾಲಯಗಳಿಗೂ ಧರ್ಮಛತ್ರ-ದೇಗುಲಗಳಿಗೂ ಬಿಡಿಬಿಡಿಯಾಗಿ ಸುತ್ತವರಿದ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೂ ಚೌಲ, ಮುಂಜಿ, ಮದುವೆ, ಯಾತ್ರೆ ತೀರ್ಥಗಳಿಗೆಂದು ಕೈನೀಡಿ ಸಾಲುಗಟ್ಟಿ ಬಂದ ಬಡವರಿಗೂ ಸಾಲ ಮಾಡಿಯಾದರೂ ಒಂದು ಕೇಳಿದರೆ ಹತ್ತು ಕೊಟ್ಟರೇ ವಿನಾ ಎಂದೆಂದಿಗೂ ತಮ್ಮ ಆರ್ಥಿಕ ಅಡಚಣೆ ಕುರಿತು ಯಾರಲ್ಲಿಯೂ ಚಕಾರ ಎತ್ತಲಿಲ್ಲ. ಬಡವರ ಬಂಧು ಅವರು.

1925ರಲ್ಲಿ ಬೆಂಗಳೂರಿಗೆ ಬಂದರು. ಯಾವಾಗಲೂ ವಾಸಕ್ಕೆ ದೊಡ್ಡ ಬಂಗಲೆಯನ್ನೇ ಗೊತ್ತುಮಾಡುತ್ತಿದ್ದವರು ಚಿಕ್ಕ ಮನೆಯನ್ನು ಗೊತ್ತುಮಾಡಬೇಕಾಯಿತು. ಹಲವಾರು ನಟರು ನಾಟಕಮಂದಿರದಲ್ಲೆ ಮಲಗುತ್ತಿದ್ದರು. ಅನಾರೋಗ್ಯದಿಂದ ಆಚಾರ್ಯರು ಒಂದೊಂದು ದಿನ ಮಾತ್ರ ಪಾತ್ರ ವಹಿಸುತ್ತಿದ್ದರು. 1926ರ ಜನವರಿಯಲ್ಲಿ ಒಂದು ದಿನ ‘ಗುಲೇಬಕಾವಲಿ’ಯಲ್ಲಿ ಅವರು ಅಭಿನಯಿಸುತ್ತಾರೆ ಎಂದು ಪ್ರಕಟಿಸಿ ಆಗಿಹೋಗಿತ್ತು. ಅಂದು ಅವರಿಗೆ ತೀರ ಅನಾರೋಗ್ಯ. ಹೊಟ್ಟೆ ಉಬ್ಬರಿಸಿಕೊಂಡಿತ್ತು, ಏಳುವುದು ಕೂಡುವುದು ಕಷ್ಟ. ಆದರೂ ಕಷ್ಟದಿಂದ ಅಭಿನಯಿಸಿ, ಹಾಡಿ ಜನರನ್ನು ತೃಪ್ತಿಗೊಳಿಸಿದರು. ನಾಟಕ ಮುಗಿಯುವ ಹೊತ್ತಿಗೆ ಅವರು ಮಾತಾಡುವ ಸ್ಥಿತಿಯಲ್ಲೆ ಇರಲಿಲ್ಲ. ಅದೇ ಅವರ ಕಡೆಯ ಅಭಿನಯ ಆಯಿತು. 1926ರ ಏಪ್ರಿಲ್ 4ನೆಯ ದಿನದಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಚಾರ್ಯರು ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು.

ವರದಾಚಾರ್ಯರ ರಂಗಜೀವನದ ಅತ್ಯಂತ ಸ್ಥೂಲವಾದ ಹೊಳಹು ಇದು. ಅವರ ಪ್ರವೇಶವಾಗುವವರೆಗೆ ನಮ್ಮ ವೃತ್ತಿರಂಗ(ಎಂದರೆ ಕಂಪೆನಿಗಳ ರಂಗ) ಒಂದು ದೃಷ್ಟಿಯಿಂದ ಅತಿರೇಕಗಳ ಹುಟ್ಟುನೆಲ. ಸಂಗೀತ ಬಲ್ಲವನೇ ಆಗ ಸಾರ್ಥಕ ನಟ! ಅರ್ಥವಿಲ್ಲದಿದ್ದರೂ ಆರ್ಭಟದ ಆಟಾಟೋಪ ಮಾಡುತ್ತಿದ್ದವನೇ ಪರಿಣತ ಕಲಾವಿದ! ಹೀಗೆ, ಇನ್ನೆಲ್ಲಿಯೂ ಸಲ್ಲದವರು ರಂಗದಲ್ಲಿ ಸಲ್ಲುತ್ತಾರೆ ಎನ್ನುವಂತಿದ್ದ ಆ ಕಾಲ ಧರ್ಮವನ್ನು ವರದಾಚಾರ್ಯರು ಕಲಕಿದರು. ಕಾಲು ಶತಮಾನದ ತಮ್ಮ ರಂಗಜೀವನದಲ್ಲಿ ಆಚಾರ್ಯರು ಕನ್ನಡ ವೃತ್ತಿರಂಗದ ನಡೆಯನ್ನು ಏರ್ಪಡಿಸಿದರು. ಅದನ್ನು ಕತ್ತಲೆಯಿಂದ ಬೆಳಕಿನ ಹಾದಿಗೆ ತಂದರು. ರಂಗದಲ್ಲಿ ಅವರು ಸಾಧಿಸಿತಂದ ಸುಧಾರಣೆಗಳು ಈ ಮಾತಿಗೆ ಸಾಕ್ಷಿ ನುಡಿಸಿದವು.

ವರದಾಚಾರ್ಯರ ಕಾಲವೆಂದರೆ ಕನ್ನಡ ವೃತ್ತಿ ರಂಗದ ಸ್ವರ್ಣಯುಗವೆನಿಸಿತು; ಆಚಾರ್ಯರು ಆ ಯುಗವನ್ನಾಳಿದ ಸ್ವರ್ಣಮೂರ್ತಿಯೆನಿಸಿಕೊಂಡರು.

No comments:

Post a Comment